Published - Tue, 03 Oct 2023

Food and life style solutions for Rheumatoid arthritis

ಇದು ಆಯುರ್ವೇದದಲ್ಲಿ ಮಾತ್ರ ಹೇಳಿರುವ ಸತ್ಯ...


  ನಮ್ಮ‌ಆಹಾರಗಳಲ್ಲೇ ಅನೇಕ ಕಾಯಿಲೆಗಳನ್ನು ತಡೆಯಬಹುದು, ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಬಹುದು, ಚಿಕಿತ್ಸೆ ಕೂಡಾ ಮಾಡಿಕೊಳ್ಳಬಹುದು...

•••••••••••••••••••••••••••••••••••••••

ಕಾಯಿಲೆಯ ಪರಿಚಯ:

  ಆಳವಾದ ಅಜೀರ್ಣ ರೋಗವು, ರಸದ ರೂಪದಲ್ಲಿ ಸರ್ವಶರೀರವನ್ನು ಸಂಚರಿಸಿ, ಸಂಧಿಗಳ ನೋವು, ಊತ, ಸೆಳೆತ, ಮಾಂಸಖಂಡಗಳ ಬಿಗಿ ಹಿಡಿತ, ಬೆನ್ನು ಹಿಡಿಯುವಿಕೆ. ಚಳಿಗೆ ಹೆಚ್ಚಾಗುವಿಕೆ, ಚೇಳು ಕಡಿದವರಂತೆ ತಡೆಯಲಾರದ ನೋವನ್ನು ತರುವುದೇ ಆಮವಾತ ಇಲ್ಲಿ ಆಧುನಿಕರ ರುಮ್ಯಾಟಿಸಮ್‌ಗೆ ಸರಿಹೊಂದುವ, ಲಕ್ಷಣಗಳಿವೆ...


ಚಿಕಿತ್ಸಾ ದೃಷ್ಟಿ:

  ಇಲ್ಲಿ ಕಾಯಿಲೆಯ ಕಾರಣ ತಿಳಿಯಬೇಕು ಮತ್ತು ಅವುಗಳನ್ನು ತಕ್ಷಣದಿಂದ ನಿಲ್ಲಿಸಬೇಕು. ಇದು ಮೊದಲ ಚಿಕಿತ್ಸೆ...

ನಂತರ,

  ಈ ಕಾಯಿಲೆಗೆ ನಿರ್ದಿಷ್ಟ ಆಹಾರವನ್ನು ಆಯುರ್ವೇದ ಆಚಾರ್ಯರು ಉಲ್ಲೇಖಿಸಿದ್ದಾರೆ. ಅವುಗಳನ್ನು ತಪ್ಪದೇ ಪಾಲಿಸಬೇಕು...


ಆಮವಾತಕ್ಕೆ ಕಾರಣವೇನು?:

  ಆಲಸ್ಯ, ಶಾರೀರಿಕ ಶ್ರಮ ವಹಿಸದೇ ಆಲಸಿಯಾದ ಜೀವನಶೈಲಿ, ಅಜೀರ್ಣ ಇರುವಾಗ ಆಹಾರ ಸೇವನೆ...

ಮತ್ತು ಶಕ್ತಿಭರಿತ ಸಕ್ಕರೆ, ಎಣ್ಣೆ, ಗೋಧಿ, ಉದ್ದುಗಳಂತಹ ಆಹಾರ ಸೇವನೆಯ ತಕ್ಷಣವೇ ಬೆವರು ಬರುವಂತೆ ಓಡುವುದು, ಕೆಲಸ ಮಾಡುವುದು, ಮೈಥುನಕ್ರಿಯೆ ನಡೆಸುವುದು...


ಇವುಗಳಿಂದ ಹೇಗೆ ಏಕೆ ಆಮವಾತ ಬರುತ್ತದೆ?:

  ಆಲಸ್ಯದ ವ್ಯಕ್ತಿ, ಶಕ್ತಿಯುತ ಆಹಾರ ಸೇವಿಸಿದರೆ, ಅಜೀರ್ಣವಾಗುವುದು, ಪಾಚನ ಶಕ್ತಿ ಕ್ಷೀಣಿಸುವುದು ಸತ್ಯ. ಇಂತವರು, ಒಮ್ಮಿಂದೊಮ್ಮೆ ಸಶಕ್ತ ಆಹಾರ ಸೇವಿಸಿ, ಬೆವರನ್ನು ಹೊರಹಾಕುವ ಕ್ರಿಯೆಗಳಲ್ಲಿ ಕೆಲವೇ ಕಾಲ ತೊಡಗಿದರೂ ಸಹ ತೊಂದರೆ ಖಚಿತ. ಇಲ್ಲಿ ಪಚನವಾಗದ ಆಹಾರ ಕರುಳುಗಳಲ್ಲಿ ಇರುತ್ತದೆ, ಬೆವರು ಅಂತಹ ಆಹಾರವನ್ನು ರಕ್ತಕ್ಕೆ ಸೆಳೆದೆಳೆಯುತ್ತದೆ. ಉದಾಹರಣೆಗೆ - ಗಿಡದ ಎಲೆಗಳು ನೀರನ್ನು ಹೊರಹಾಕುತ್ತಿದ್ದರೆ ಬೇರು ನೀರನ್ನು ಸೆಳೆದೆಳೆದು ಕೊಡುವಂತೆ. ಕರುಳಿನಿಂದ ಅಜೀರ್ಣದ ರಾಸಾಯನಿಕಗಳು ಸೆಳೆದು ರಕ್ತದೊಂದಿಗೆ ಬೆರೆತುಬಿಡುತ್ತವೆ. ಆಹಾರವೇ ಆದರೂ, ಸೂಕ್ತ ವಿಭಜನೆ ಇಲ್ಲದೇ ರಕ್ತವನ್ನು ಸೇರಿದ ಈ ಆಹಾರದ ರಾಸಾಯನಿಕಗಳಿಗೆ ಪ್ರತಿಕ್ರಿಯೆ ರೂಪವಾಗಿ ರಕ್ತದ ಅಸ್ವೀಕೃತಿಯೇ ಸಂಧುಗಳ ಮತ್ತು ಮಾಂಸಖಂಡಗಳ ಊತ. ಈ ಅಜೀರ್ಣ ಆಹಾರದ ಅಂಶವನ್ನು ಯಾವುದೋ ಅಪಾಯಕಾರೀ ಅಂಶ ಶರೀರ ಸೇರಿದೆ ಎಂದು ರಕ್ತದ ಅಟೋ ಇಮ್ಯೂನ್ ಸಿಸ್ಟಂ ಸ್ವಯಂ ಚಾಲನೆಗೊಂಡು ಆ ರಾಸಾಯನಿಕವನ್ನು ನಿವಾರಿಸುತ್ತದೆ. ಹೀಗೆ ಸ್ವಯಂಚಾಲಿತ ಇಮ್ಯುನಿಟಿಯೇ ಆಮವಾತ! 


ಆಮವಾತಹರ ಆಹಾರ:

  ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು, ಸ್ವಲ್ಪವೇ ಸ್ವಲ್ಪ ಬೆಲ್ಲ ಸೇರಿಸಿ, ಖಾಲಿ ಹೊಟ್ಟೆಗೆ ಬೆಳಿಗ್ಗೆ ಸಂಜೆ ಕುಡಿಯುವುದು...


ಅಪಥ್ಯ: 

  ಮೊಸರು, ಮಾಂಸಾಹಾರ, ಮೈದಾ, ಉದ್ದು, ಗೋಧಿ ಮುಂತಾದ ಅಜೀರ್ಣವಾಗುವ ಆಹಾರದ ಸೇವನೆ, ಅತಿಮಾತ್ರ ಆಹಾರ ಸೇವನೆ, ಇವುಗಳಿಂದ ತಕ್ಷಣ ರೋಗ ಹೆಚ್ಚುತ್ತದೆ. ಇವುಗಳನ್ನು ತ್ಯಜಿಸಿ ಬಿಡಿ. ಹಾಗೆಯೇ, ಹಗಲು ನಿದ್ದೆ, ಗಾಳಿಗೆ ಮೈ ಒಡ್ಡಿ ಕುಳಿತುಕೊಳ್ಳುವುದು, ಅಜೀರ್ಣದಲ್ಲಿ ನಡಿಗೆ, ಓಡುವುದು. ಇವುಗಳೂ ಸಹ ಅಪಥ್ಯಗಳು, ಇವುಗಳನ್ನು ಮಾಡಬಾರದು...


ಆಮವಾತಹರ ವಿಹಾರ:

  ಅಲ್ಪ ಆಹಾರ, ಅಲ್ಪ ಚೇಷ್ಠಾ, ನಿರಂತರ ವಿಚಾರ ಮಗ್ನತೆ, ಉಷ್ಣಜಲಪಾನ, ಉಷ್ಣ ಉಪಚಾರ ಅಂದರೆ ಸ್ನಾನ, ಮುಖಪ್ರಕ್ಷಾಲನಕ್ಕೆ ಉಷ್ಣಜಲದ ಉಪಯೋಗ. 


  ಗುದಪ್ರಕ್ಷಾಲನಕ್ಕೂ ಉಷ್ಣಜಲ ಬಳಸಬಹುದು.


ಆಮವಾತ ಚಿಕಿತ್ಸೆ:

  ಅಮೃತಬಳ್ಳಿ, ಶುಂಠಿ, ಭದ್ರಮುಸ್ತ, ಏರಂಡಗಳ ಕಷಾಯ ಸೇವನೆ. ಪಂಚಕರ್ಮ ಚಿಕಿತ್ಸೆಯಲ್ಲಿ - ಸದ್ಯೊ ವಿರೇಚನ ಮತ್ತು ಯೋಗಬಸ್ತಿ...

•••••••••••••••••••••••••••••••••••••••

  ಈ ಎಲ್ಲಾ ಕಾರಣಗಳಿಂದ ಆಮವಾತವನ್ನು ಆಹಾರದಿಂದ ಗುಣಪಡಿಸಬಹುದಾದ ಸಂಗತಿಗಳನ್ನು ಹಂಚಿಕೊಳ್ಳಲು ಬಯಸಿ ಆಹಾರವೇ ಔಷಧ ಎಂಬ ಶೀರ್ಷಿಕೆಯ ಮಾಲಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ...


  ಆಚಾರ್ಯರ ಈ ರೋಗನಿದಾನಗಳು (ಕಾಯಿಲೆಯ ಕಾರಣಗಳು) ಸರ್ವಕಾಲಕ್ಕೂ ಪ್ರಸ್ತುತವಾದ ಸತ್ಯಸಂಗತಿಗಳು, ಆದ್ದರಿಂದ ದಯಮಾಡಿ ಸಂಗ್ರಹಿಸಿಟ್ಟು, ಬಳಸಿಕೊಳ್ಳಿ...

 •••••••••••••••••••••••••••••••••••••••


Created by

Comments (0)

Search
Popular categories
Latest blogs
Why Ayurveda gives importance to food
Why Ayurveda gives importance to food
•••••••••••••••••••••••••••••••••••••••  ಆಹಾರದ ಜೊತೆಗಿನ ನೈಸರ್ಗಿಕ ಸಂಬಂಧ ಮತ್ತು ಅದಕ್ಕೆ ಕೊಡುವ ಗೌರವ ಎಂದರೆ ನಿಯಮಗಳು, ಇವುಗಳ ಜೊತೆಗಿನ ಪಯಣವೇ ಆರೋಗ್ಯ.  "ಆಹಾರ ಒಂದು ನಿರ್ಜೀವ ವಸ್ತುವಲ್ಲ, ಅದು ನಮ್ಮ ಅವ್ಯಕ್ತ ಶರೀರ!!"  ಈ ಶರೀರ ನಿತ್ಯವೂ ಸರಿಯಾಗಿ ನಡೆಯಲು ನಿರ್ದಿಷ್ಟ ನಿಯಮಗಳಿವೆ --  ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ,  ನಾಲಿಗೆಯಿಂದ ಮಾತ್ರ ರುಚಿ ಸಾಧ್ಯ,  ಕೈಯಿಂದ ಕೆಲಸ ಸಾಧ್ಯ,  ಕಾಲಿನಿಂದ ನಡಿಗೆ ಸಾಧ್ಯ...  ಹಾಗೆಯೇ, ಆಹಾರಕ್ಕೂ ನಿರ್ದಿಷ್ಟ ನಿಯಮಗಳಿವೆ, ಆಹಾರದ ಈ ರೀತಿಯ ತಯಾರಿಕೆ ಮಾತ್ರ ನಮಗೆ ಇಂತಹ ಅನುಕೂಲವನ್ನು ಸೃಷ್ಟಿಸುತ್ತದೆ, ಇಲ್ಲದಿದ್ದರೆ ಸಹಜ ಚಲನೆಗೆ ಅನಾನುಕೂಲ ಮಾಡುತ್ತದೆ, ಅದೇ ಅನಾರೋಗ್ಯ ಅಥವಾ ವ್ಯಾಧಿ.•••••••••••••••••••••••••••••••••••••••  ಮಾನವನ‌ ವ್ಯಾಧಿಗಳಲ್ಲಿ ಹೆಚ್ಚಿನವು, ಅಪಘಾತಗಳನ್ನು ಹೊರತುಪಡಿಸಿ ಶರೀರದೊಳಗೆ ಆದ ವ್ಯತ್ಯಾಸದಿಂದ ಆದಂತಹುಗಳು. ಇದಕ್ಕೆ ಕಾರಣ, ನಮ್ಮ ಆಹಾರದ ಆಯ್ಕೆ ಮತ್ತು ತಯಾರಿಕಾ ನಿಯಮಗಳ ವ್ಯತ್ಯಾಸ.  ವ್ಯಾಧಿಗಳಿಗೆ ಆಹಾರದ ಅನಿಯಮಗಳು ಕಾರಣ ಎಂದಾದರೆ, "ಕಾರಣ ತ್ಯಾಗ ಮಾಡಬೇಕಲ್ಲವೇ?" ನಿತ್ಯವೂ ತೊಂದರೆ ಕೊಡುವ ಯಾವುದನ್ನೇ ಆದರೂ ನಾವು ರಿಪೇರಿ ಅಥವಾ ರೀಪ್ಲೇಸ್ ಮಾಡುತ್ತೇವೆ ಅಲ್ಲವೇ? ಹಾಗೆಯೇ, ಸಹಜ ಜೀವನಕ್ಕೆ ಅಡ್ಡಿಪಡಿಸುವ ಈ ಆಹಾರ ಅನಿಯಮಗಳನ್ನು ತ್ಯಜಿಸುವುದೇ ರಿಪೇರಿ‌ ಎಂದಾಗುತ್ತದೆ, ಇದನ್ನೇ ಆಚಾರ್ಯರು, "ನಿದಾನ ಪರಿಮಾರ್ಜನಮೇವ ಚಿಕಿತ್ಸಾ" ಎಂದಿದ್ದಾರೆ.  ಅಂದರೆ, "ಚಿಕಿತ್ಸೆ ಎಂದರೆ ಕಾರಣಗಳ ತ್ಯಾಗ" ಎಂದರ್ಥ. ಏಕೆ ತ್ಯಾಗ ಮಾಡಲೇಬೇಕು? ಎಂದರೆ ತ್ಯಾಗ ಮಾಡದಿದ್ದರೆ ಅದೇ ಹಂತದಲ್ಲಿ ಇರುತ್ತೇವೆ. ಮಗು ಹತ್ತನೇ ತರಗತಿಯನ್ನು ತ್ಯಾಗ ಮಾಡಿದ್ದರೆ, ಹನ್ನೊಂದಕ್ಕೆ ವರ್ಗ, ಇಲ್ಲದಿದ್ದರೆ ಅಲ್ಲೇ ಇರುತ್ತದೆ ಅಥವಾ ಶಿಕ್ಷಣದಿಂದಲೇ ಹೊರಬರುತ್ತದೆ.  ಹಾಗೆಯೇ, ರೋಗದ‌ ಕಾರಣವಾದ ಆಹಾರ ತ್ಯಾಗ ಅಥವಾ ತಪ್ಪು ತಯಾರಿಕಾ ವಿಧಾನ ತ್ಯಾಗ ಮಾಡದಿದ್ದರೆ, ರೋಗದಲ್ಲೇ ಉಳಿಯುತ್ತೇವೆ ಅಥವಾ ಶರೀರದಿಂದಲೇ ಹೊರಹೋಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮರಣದೆಡೆಗೆ ಸಾಗುತ್ತೇವೆ.  ಹೀಗಾಗಿ, ಆಯುರ್ವೇದ ವೈದ್ಯ ತನ್ನೆಲ್ಲಾ ಶ್ರಮವನ್ನು ಕಾರಣ ಹುಡುಕುವುದರ ಕಡೆಗೇ ಹಾಕುತ್ತಾನೆ. ಶತಾಯಗತಾಯ ರೋಗಿಯಿಂದ ಅದನ್ನು ಬಿಡಿಸಲು ಪ್ರಯತ್ನಿಸುತ್ತಾನೆ.  ಅಂತವನು ಮಾತ್ರ ನಿಜವಾದ ವೈದ್ಯನಲ್ಲವೇ?•••••••••••••••••••••••••••••••••••••••  ನೀವು ಗಮನಿಸಲೇಬೇಕಾದ ಅಂಶ ಎಂದರೆ, ಯಾವಾಗಲೂ ಔಷಧ ಆರೋಗ್ಯ ಕೊಡುತ್ತದೆ ಎಂಬ "ಸುಳ್ಳ"ನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ಆಯುರ್ವೇದ ಎಂದರೆ ಪಥ್ಯ ಎಂದು ಮೂಗು ಮುರಿಯದಿರುವುದು.  ಎರಡು ವಿಷಯಗಳನ್ನು ನೆನಪಿಡಿ -- • ಇದು ಪಥ್ಯವಲ್ಲ, ಈಗಾಗಲೇ ಕೆಟ್ಟಿರುವ ಮತ್ತು ಹೆಚ್ಚಿನ‌ ಜನ‌ ಅದನ್ನು "ಮಾಮೂಲಿ ಆಹಾರ" ಎಂದು ಸೇವಿಸುತ್ತಿರುವ ಆಹಾರದ ಬಗ್ಗೆ ನೈಜ ತಿಳಿವಳಿಕೆಯನ್ನು ಪಡೆಯಿರಿ. ಮತ್ತು• ಆರೋಗ್ಯಕ್ಕಾಗಿ ಇವುಗಳ ಪಾಲನೆ ಅನಿವಾರ್ಯ, ಇದಕ್ಕೆ ಯಾವುದೇ ಅಡ್ಡ ಅಥವಾ ಹತ್ತಿರದ ಮಾರ್ಗಗಳಿಲ್ಲ.•••••••••••••••••••••••••••••••••••••••   ಧನ್ಯವಾದಗಳು   

Tue, 03 Oct 2023

Don't set alarm for wakeup morning  Set alarm to sleep at night
Don't set alarm for wakeup morning Set alarm to sleep at night
•••••••••••••••••••••••••••••••••••••••  ಅಲಾರಾಮ್ ಇಟ್ಟು ಏಳುವುದಲ್ಲ; ಮಲಗುವುದು ಆರೋಗ್ಯಕರ....!!!  ಅಚ್ಚರಿಯೇ? ಆದರೆ, ಇದೊಂದು ಆಯುರ್ ವೈದ್ಯಕೀಯ ಸತ್ಯ ಮಾಹಿತಿ.  1) ನಮ್ಮನ್ನು ಎಚ್ಚರಿಸಲು ಇರುವ ಸಾಧನವೇ ಅಲಾರಾಮ್, ಆದರೆ ಅದು ನಿದ್ದೆಯಿಂದ ಎಚ್ಚರಿಸಲು ಎಂದಿಗೂ ಅಲ್ಲ....!  2) ಅಪೂರ್ಣ ನಿದ್ದೆಯಿಂದ ಎಚ್ಚರಿಸಲು ಅಲಾರಾಮ್ ಬಳಸಿದರೆ, ಮೆದುಳಿಗೆ ಶಾಕ್ ಆಗುತ್ತದೆ, ಮೆದುಳಿನ ಅನೇಕ ನರಗಳು ಶಾಶ್ವತವಾಗಿ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ...  3) ಬೇಗ ಏಳುವುದು ಖಂಡಿತಾ ಆರೋಗ್ಯಕರ, ಆದರೆ ನೆನಪಿಡಿ, ಅಪೂರ್ಣ ನಿದ್ದೆಯಿಂದ ಏಳುವುದು ಮಹಾ ಹಾನಿಕರ.  4) ಪೂರ್ಣ ನಿದ್ದೆ ಆದ ವ್ಯಕ್ತಿಯನ್ನು ಎಚ್ಚರಿಸಲು ಅಲಾರಾಮ್ ಬೇಕಿಲ್ಲ, ಅದೊಂದು ಸಹಜ ಪ್ರಕ್ರಿಯೆ.  5) ನಿದ್ದೆಯ ಸಮಯವನ್ನು ಮೀರಿ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವ ನಮ್ಮನ್ನು, ನಿದ್ದೆಗೆ ಸಮಯವಾಯ್ತು ಎಂದು ಎಚ್ಚರಿಸಲು ಅಲಾರಾಮ್ ಬಳಸಿ, ಮಲಗುವ ವ್ಯವಸ್ಥೆ ಮಾಡಿಕೊಳ್ಳಿ  6) ಬೇಗ ಏಳಬೇಕೆಂದರೆ ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ಬೇಗ ಮಲಗುವುದು, ಅಲ್ಲವೇ?  7) ಅಲಾರಾಮ್ ಘಂಟೆಯ ಧ್ವನಿಯಿಂದ ಶಾಕ್ ಆದ ಮೆದುಳಿನ ಆಯಾಸ ಓದಲು ಸಮರ್ಥವಲ್ಲ, ಆದ್ದರಿಂದ ನೀವು ಎಚ್ಚರಗೊಳಿಸಿದರೂ ಆಗ ಮಕ್ಕಳು ತೂಕಡಿಸುತ್ತವೆಯೇ ಹೊರತೂ ವಿಷಯಗ್ರಹಣೆ ಮಾಡಲಾರವು...  8) ಬ್ರಾಹ್ಮಿ ಮುಹೂರ್ತವು ಆ ದಿನದ ಕೆಲಸಗಳನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಲು ಅತ್ಯಂತ ಶ್ರೇಯಸ್ಕರ. ಕೆಲಸ ಮಾಡಲು ಅಲ್ಲ.  9) ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಗೊಂಡರೂ ಸಹ, ಜೀರ್ಣಾಜೀರ್ಣದ ಕಡೆ ಗಮನಕೊಟ್ಟು, ಏಳಬೇಕೇ?ಅಥವಾ ಇನ್ನೂ ಮಲಗಬೇಕೇ? ಎಂದು ನಿರ್ಧರಿಸಬೇಕು.  10) ಸಹಜವಾಗಿ ಎಚ್ಚರಗೊಂಡರೂ ಸಹ ಹಿಂದಿನ‌ ರಾತ್ರಿಯ ಆಹಾರ ಜೀರ್ಣವಾಗಿದ್ದರೆ ಎದ್ದುಬಿಡಿ. ಜೀರ್ಣವಾಗಿಲ್ಲ ಎನಿಸಿದರೆ, ಬಲವಂತದಿಂದ ಎದ್ದು ಕೆಲಸ ಆರಂಭಿಸುವ ಬದಲು ನಿದ್ದೆಯನ್ನು ಪೂರ್ಣಗೊಳಿಸಿ.  ಆಹಾರ ಜೀರ್ಣಗೊಂಡರೆ, ಮಲಪ್ರವೃತ್ತಿ ಸಹಜವಾಗಿ ಆಗುತ್ತದೆ, ಸಹಜ ಮಲಪ್ರವೃತ್ತಿ ಹಸಿವನ್ನು ಹೆಚ್ಚಿಸುತ್ತದೆ, ಹೆಚ್ಚಿದ ಹಸಿವಿನ ಅಗ್ನಿ ಆಹಾರವನ್ನು ಪಚಿಸುತ್ತದೆ, ಶರೀರಕ್ಕೆ ಬಲ ತರುತ್ತದೆ ಮತ್ತು ರೋಗಗಳನ್ನು ಭಸ್ಮ ಮಾಡುತ್ತದೆ. ಆದ್ದರಿಂದ ನಿನ್ನೆಯ ಆಹಾರ ಜೀರ್ಣವಾಗುವುದು ಅತ್ಯಂತ ಮುಖ್ಯ, ಅದು ಸಂಪೂರ್ಣ ನಿದ್ದೆಯಿಂದ ಮಾತ್ರ ಸಾಧ್ಯ!ಧನ್ಯವಾದಗಳು •••••••••••••••••••••••••••••••••••••••

Tue, 03 Oct 2023

Fermented food is dangerous
Fermented food is dangerous
   ಬೇಯಿಸಿ ರಾತ್ರಿಕಾಲ ಇಟ್ಟು, ಬೆಳಗಾದ ಮೇಲೆ, ತಂಗಳಾದ ಮೇಲೆ ಉಪಯೋಗಿಸಬಾರದು. ಇವು ವಿಷಕಾರಿಗಳು.  ಸೇವಿಸುವ ಆಹಾರವನ್ನು ರಕ್ಷಣೆ ಮಾಡುವ 'ಅನ್ನರಕ್ಷಾವಿಧಿ' ಆಧ್ಯಾಯದಲ್ಲಿ ಆಚಾರ್ಯ ವಾಗ್ಭಟರು ತಂಗಳು ತಿನ್ನುವುದು ವಿಷಕಾರಿ ಎಂದು ಸ್ಪಷ್ಟ ಮಂತ್ರಗಳಲ್ಲಿ ಹೇಳಿದ್ದಾರೆ.••••••••••••••••••••••••••••••••••••••  ರಾತ್ರಿ ಅನ್ನದಿಂದ B12 ಸಿಗುತ್ತದೆ, ಒಳ್ಳೆಯದು ಎನ್ನುತ್ತಾರಲ್ಲವೇ  ಇದರಲ್ಲಿ ಒಂದು ತಪ್ಪು ಇದೆ, ಕೆಲವು ಬ್ಯಾಕ್ಟೀರಿಯಾಗಳು ಬೆಳೆದಿರುವ ಕಾರಣ, ಅವುಗಳು B12 ತಯಾರಿಸಿರುತ್ತವೆ. ತಂಗಳನ್ನದಲ್ಲಿ B12 ಇರುತ್ತದೆ ಎನ್ನಬಹುದೇ ಹೊರತೂ 'ಸಿಗುತ್ತದೆ' ಎನ್ನಬಾರದು.  ಇದ್ದರೂ ಏಕೆ ನಮಗೆ ಸಿಗುವುದಿಲ್ಲ, ಎಂದರೆ ಯಾವುದೇ ವಸ್ತು ಅಥವಾ ಧಾನ್ಯಗಳಲ್ಲಿ ಇರುವ ಯಾವುದೇ ಗುಣ-ದೋಷಗಳು ಎಂದಿಗೂ ಯಥಾವತ್ತಾಗಿ ನಮಗೆ ಸಿಗುವುದಿಲ್ಲ. ವಿಶೇಷವಾಗಿ ಮಾನವ ಶರೀರದ ಪೋಷಣೆ ವಿಭಿನ್ನವಾಗಿದೆ. ಮೊದಲು ಮನಸ್ಸು ಏಕಾಗ್ರಗೊಳ್ಳದೇ ಯಾವುದೇ ವಿಷಯ ನಮ್ಮ ಮನಸ್ಸನ್ನೂ ಮತ್ತು ಯಾವುದೇ ಆಹಾರ ನಮ್ಮ ಶರೀರವನ್ನು ಸೇರದು.  ಏಕೆ ತಿನ್ನಬಾರದು?:  ತಂಗಳನ್ನವು ಮನಸ್ಸಿನ ತಮೋಗುಣವನ್ನು ಹೆಚ್ಚಿಸುತ್ತದೆ, ತಮೋಗುಣವು ಏನನ್ನೇ ಆಗಲಿ ಸ್ವೀಕರಿಸುವುದು ಅಸಾಧ್ಯ. ಪಾಠ ಕೇಳುವಾಗ ತಮೋಗುಣದ ಕಾರಣ ಅರೆನಿದ್ದೆಯಲ್ಲಿದ್ದರೆ ಅಥವಾ ತೂಕಡಿಕೆಯಲ್ಲಿದ್ದರೆ ಒಂದೇ ಒಂದು ಶಬ್ದವೂ ಮನೋಬುದ್ಧಿಯನ್ನು ಸೇರುವುದಿಲ್ಲ.  ಹಾಗೆಯೇ, ರಜೋಗುಣ ವರ್ಧನೆ ಆಗಿ ಮನಸ್ಸು ಚಂಚಲವಾಗಿ ಎಲ್ಲೆಲ್ಲೋ ಸುತ್ತುತ್ತಾ ಇದ್ದರೆ, ನಿದ್ದೆ ಮಾಡದಿದ್ದರೂ ಪಾಠ ಮನಕ್ಕೆ ಇಳಿದಿರುವುದಿಲ್ಲ  ಕೆಲವು ತಂಗಳು ಆಹಾರಗಳು 'ತಮಸ್ಸನ್ನು ವರ್ಧಿಸುವವು' ಉದಾ: ತಂಗಳು ಅನ್ನ  ಕೆಲವು ತಂಗಳು ಆಹಾರಗಳು 'ರಜೋಗುಣವನ್ನು ವರ್ಧಿಸುತ್ತವೆ' ಉದಾ: ದೋಸೆ, ಇಡ್ಲಿ  ಇನ್ನೊಂದು ವಿಷಯ ಎಂದರೆ -- ತಂಗಳನ್ನದಿಂದ ಮಾತ್ರ ಅಪ್ರಯೋಜನ ಎಂದು ಭಾವಿಸಬಾರದು. ಬೇರೆ ಸಮಯದಲ್ಲಿಯೂ ಸೇವಿಸಿದ ಅತ್ಯಂತ ಗುಣವಾನ್ ಆಹಾರದ ಸೂಕ್ಷ್ಮಗುಣಗಳನ್ನೂ ಸಹ ದೇಹ ಹೀರದೇ ನಮಗೆ ಅತ್ಯಂತ ಹಾನಿಯನ್ನು ತರುತ್ತದೆ.  ಗಮನಿಸಿ ನೋಡಿ -- ತಂಗಳು ತಿನ್ನುವವರ ಮನಸ್ಸು ಸಣ್ಣ ಸಣ್ಣ ವಿಷಯಕ್ಕೆ ಭಯ ಅಥವಾ ಕಿರಿಕಿರಿಗೊಳ್ಳುತ್ತದೆ. ಕೆಲವರಿಗೆ ಅಪಸ್ಮಾರ ರೋಗವನ್ನೂ ತರುತ್ತದೆ...   ಹಾಗಾಗಿ, ತಂಗಳನ್ನು ರಾಸಾಯನಿಕ ದೃಷ್ಟಿಯಿಂದ ನೋಡಬಾರದು...     ಧನ್ಯವಾದಗಳು••••••••••••••••••••••••••••••••••••••

Tue, 03 Oct 2023

All blogs